Friday, February 4, 2011

ಕರುಣಾಮಯಿ ಜಗದ್ಗುರುಗಳು

[’ಶಂಕರಕೃಪ’ ದಲ್ಲಿ ಪ್ರಕಟ]

||ಶ್ರೀ ಗುರುಭ್ಯೋ ನಮಃ||

ಕರುಣಾಮಯಿ ಜಗದ್ಗುರುಗಳು

ಅಜ್ಞಾನಾಂ ಜಾಹ್ನವೀ ತೀರ್ಥಂ ವಿದ್ಯಾತೀರ್ಥಂ ವಿವೇಕಿನಾಮ್|

ಸರ್ವೇಷಾಂ ಸುಖದಂ ತೀರ್ಥಂ ಭಾರತೀತೀರ್ಥಮಾಶ್ರಯೇ||

ಪ್ರತಿಯೊಬ್ಬ ಶ್ರದ್ಧಾವಂತ ಹಿಂದೂವಿನ ಪಾಲಿಗೆ ಶೃಂಗೇರಿ ಕ್ಷೇತ್ರವು ಪೂಜನೀಯವೆನಿಸಿದೆ. ಇಲ್ಲಿನ ಪ್ರಶಾಂತ ವಾತಾವರಣ, ತಾಯಿ ಶಾರದೆಯ ಅಭಯಹಸ್ತ, ಶ್ರೀಮಠದ ಧಾರ್ಮಿಕ ಪರಿಸರವೆಲ್ಲವೂ ಎಂಥಹವರ ಮನಸ್ಸನ್ನೂ ಮುಗ್ಧಗೊಳಿಸಿ, ಶುದ್ಧ ಮಾಡುತ್ತದೆ. ಇದಕ್ಕೆಲ್ಲದಕ್ಕೂ ಕಳಶವಿಟ್ಟಂತೆ ಶತಮಾನಗಳಿಂದ ಅವಿಚ್ಛಿನ್ನವಾಗಿ ಸಾಗಿಬಂದಿರುವ ಶ್ರೀ ಶಂಕರ ಭಗವತ್ಪಾದರ ಶಿಷ್ಯಪರಂಪರೆಯಲ್ಲಿ ಶೋಭಿಸಿದ ಜಗದ್ಗುರುಗಳೆಲ್ಲರೂ ತಮ್ಮ ತಪಃಶಕ್ತಿ, ವೈರಾಗ್ಯ, ಮನುಕುಲದೆಡೆಗಿನ ಅಪಾರ ಕರುಣೆಯೇ ಮೊದಲಾದ ಮೇರುಸದೃಶ ಗುಣಗಳಿಂದ ಶೃಂಗೇರಿಯ ಸತ್ತ್ವವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಇದೇ ಪರಂಪರೆಯಲ್ಲಿ ಬಂದಿರುವ ಜಗದ್ಗುರು ಶ್ರೀ ಶ್ರೀ ಶ್ರೀ ಅಭಿನವ ವಿದ್ಯಾತೀರ್ಥ ಕರಕಮಲಸಂಜಾತ ಜಗದ್ಗುರು ಶ್ರೀ ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳು ಭಕ್ತರಿಗೆ ಸನ್ಮಾರ್ಗವನ್ನು ತೋರುತ್ತಾ ದಕ್ಷಿಣಾಮ್ನಾಯ ಶ್ರೀ ಶಾರದಾಪೀಠದಲ್ಲಿ ವಿರಾಜಮಾನರಾಗಿದ್ದಾರೆ.

ಸುಸಂಸ್ಕಾರಯುತವಾದ ವೇದವಿದ್ವಾಂಸರ ಮನೆತನದಲ್ಲಿ ಜನಿಸಿದ್ದ ಹಾಗೂ ಬಾಲ್ಯದಿಂದಲೇ ಅಧ್ಯಾತ್ಮದತ್ತ ಅಪಾರ ಒಲವನ್ನು ಹೊಂದಿದ್ದ ಮಹಾಸ್ವಾಮಿಗಳು ಮಹಾಸನ್ನಿಧಾನದ ದಿವ್ಯತೇಜಸ್ಸಿನೆಡೆಗೆ ಆಕರ್ಷಿತರಾದುದು ಸಹಜವೇ ಆಗಿದೆ. ನಂತರ ಶ್ರೀ ಶ್ರೀ ಶ್ರೀ ಅಭಿನವ ವಿದ್ಯಾತೀರ್ಥರ ಮಾರ್ಗದರ್ಶನದಲ್ಲಿ ಅಪಾರ ಪಾಂಡಿತ್ಯವನ್ನು ಗಳಿಸಿ ‘ಸಕಲನಿಗಮಾಗಮಸಾರಹೃದಯ’ ಬಿರುದಿಗೆ ಅನ್ವರ್ಥರೆನಿಸಿದ್ದಾರೆ. ಘನವಿದ್ವಾಂಸರೂ ಸಹಾ ತಲೆದೂಗುವಂತಹ ಪಾಂಡಿತ್ಯವನ್ನು ಹೊಂದಿಯೂ, ಶ್ರೀ ಸನ್ನಿಧಾನಂಗಳು ಸಾಮಾನ್ಯರ ಅಹವಾಲುಗಳನ್ನು ಕರುಣಾಹೃದಯದಿಂದ ಆಲಿಸಿ, ಅವರಿಗೆ ಅರ್ಥವಾಗುವಂತೆ ಪರಿಹಾರಗಳನ್ನು ಸೂಚಿಸುತ್ತಾರೆ. ಇವರ ಸನ್ನಿಧಿಗೆ ಬಂದ ಭಕ್ತರಾರೂ ನೋವಿನಿಂದ ಹಿಂದಿರುಗುವುದಿಲ್ಲ. ಅವರ ಮನಸ್ಸು ಶ್ರೀ ಶ್ರೀಗಳ ದರ್ಶನ, ಆಶಿರ್ವಾದಗಳಿಂದ ಪುಳಕಿತವಾಗಿರುತ್ತದೆ.

ಶ್ರೀ ಶ್ರೀಗಳ ಧಾರ್ಮಿಕತೆ:

ಶ್ರೀ ಶ್ರೀಗಳ ಧರ್ಮನಿಷ್ಠೆಯು ಭಕ್ತರಿಗೆಲ್ಲರಿಗೂ ತಿಳಿದಿರುವಂತಹದು. ಪ್ರವಾಸದಲ್ಲಿದ್ದಾಗಲೂ ಸಹಾ ಇವರ ದಿನನಿತ್ಯದ ಅನುಷ್ಠಾನವು ಎಂದಿನಂತೆಯೇ ನೆರವೇರುತ್ತದೆ. ಇವರು ನೆರವೇರಿಸುವ ‘ಚಾತುರ್ಮಾಸ್ಯ ವ್ರತ ಸಂಕಲ್ಪ’ಕ್ಕೆ ದೇಶದ ವಿವಧೆಡೆಗಳಿಂದ ಭಕ್ತರು ಆಗಮಿಸುತ್ತಾರೆ; ಅಂದು ಶ್ರೀ ಶ್ರೀಗಳು ಕೃಷ್ಣಪಂಚಕ, ವ್ಯಾಸಪಂಚಕ ಹಾಗೂ ಶಂಕರಪಂಚಕಗಳಿಗೆ ಪೂಜೆ ಸಲ್ಲಿಸುವುದನ್ನು ದರ್ಶಿಸಿ ಕೃತಾರ್ಥರಾಗುತ್ತಾರೆ. ಚಾತುರ್ಮಾಸವು ‘ಉಮಾಮಹೇಶ್ವರ ವ್ರತ’ದೊಂದಿಗೆ ಸಂಪೂರ್ಣಗೊಳ್ಳುತ್ತದೆ. ಸ್ವಾಮಿಗಳು ಮಹಾಶಿವರಾತ್ರಿಯಂದು ರಾತ್ರಿಯಿಡೀ ಪೂಜೆಮಾಡಿ ಲೋಕಕಲ್ಯಾಣಕ್ಕಾಗಿ ಪರಶಿವನಲ್ಲಿ ಪ್ರಾರ್ಥಿಸುತ್ತಾರೆ. ಈ ಸಂದರ್ಭದಲ್ಲಿ ಶ್ರೀ ಚಂದ್ರಮೌಳೀಶ್ವರನ ಸನ್ನಿಧಿಯಲ್ಲಿ ಪ್ರತೀ ಜಾವದಲ್ಲಿಯೂ ನೆರವೇರುವ ಶ್ರೀ ಶ್ರೀಗಳ ಪೂಜೆ, ವೇದವಿದ್ವಾಂಸರ ರುದ್ರ ಮತ್ತಿತರ ಮಂತ್ರಗಳ ಪಠಣ – ಇವುಗಳು ಆಸ್ತಿಕರ ಭಕ್ತಿಭಾವವು ದೃಢವಾಗುವಂತೆ ಮಾಡಿ, ಈ ಸನ್ನಿಧಿಯೇ ಭೂಕೈಲಾಸವೇನೋ ಎಂದು ತೋರುವಂತೆ ಮಾಡುತ್ತದೆಯೆಂದರೆ ಅದು ಉತ್ಪ್ರೇಕ್ಷೆಯಾಗಲಾರದು. ಶ್ರೀ ಶ್ರೀಗಳು ವಿಶೇಷ ದಿನಗಳಲ್ಲಿ ಖುದ್ದಾಗಿ ತೆರಳಿ ಪೂಜೆ ಸಲ್ಲಿಸುತ್ತಾರಲ್ಲದೇ, ಶೃಂಗೇರಿಯಲ್ಲಿರುವಾಗ ಪ್ರತೀ ಶುಕ್ರವಾರದ ದಿನದಂದು ತಾಯಿಯ ಸನ್ನಿಧಿಯನ್ನು ದರ್ಶಿಸುತ್ತಾರೆ. ಲೋಕಕಲ್ಯಾಣಾರ್ಥವಾಗಿ ಸಂಸ್ಥಾನದಲ್ಲಿ ಅತಿರುದ್ರ, ಸಹಸ್ರಚಂಡಿಯೇ ಮೊದಲಾದ ಯಾಗಗಳು ಶ್ರೀ ಶ್ರೀಗಳ ಮಾರ್ಗದರ್ಶನದಲ್ಲಿ ಆಗಾಗ ಜರುಗುತ್ತಿರುತ್ತವೆ. ಅತಿವೃಷ್ಟಿ ಅಥವಾ ಅನಾವೃಷ್ಟಿಯಂಥಹಾ ಪ್ರಕೃತಿವಿಕೋಪಗಳು ಸಂಭವಿಸಿದಾಗ ಜಗದ್ಗುರುಗಳು ಪ್ರಾರ್ಥನೆ ಸಲ್ಲಿಸಿದ ಕೂಡಲೇ ಅವುಗಳು ಶಮನವಾಗುವುದನ್ನು ಸ್ಥಳೀಯರು ಅನೇಕ ಬಾರಿ ಕಂಡಿದ್ದಾರೆ. ತಪೋವನವಾದ ನರಸಿಂಹವನದಲ್ಲಿ ಶ್ರೀ ಶ್ರೀಗಳ ವಾಸ್ತವ್ಯವಿರದಿದ್ದಾಗ ಅಲ್ಲಿನ ಕಳೆಯೇ ಮಂಕಾಗಿರುತ್ತದೆಯೆಂದು ನಮ್ಮ ನೆರೆಮನೆಯ ಹಿರಿಯರೊಬ್ಬರು ಆಗಾಗ ಹೇಳುತ್ತಿರುತ್ತಾರೆ!

ಶೃಂಗೇರಿ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ದುರ್ಗಾದೇವಸ್ಥಾನ, ಮಲಹಾನಿಕರೇಶ್ವರ ರಥೋತ್ಸವಗಳ ಸಂದರ್ಭಗಳಲ್ಲಿ ಆಸ್ತಿಕರ ಉತ್ಸಾಹ, ಶ್ರದ್ಧಾ-ಭಕ್ತಿಗಳು ದಟ್ಟವಾಗಿ ಮೇಳೈಸಿರುತ್ತವೆ. ಅದಕ್ಕೆ ಕಾರಣವೆಂದರೆ ಶ್ರೀ ಶ್ರೀಗಳು ಸ್ವಯಂ ಈ ಪವಿತ್ರ ಸಂದರ್ಭಗಳಲ್ಲಿ ಅಲ್ಲಿಗೆ ಆಗಮಿಸಿ, ಅವುಗಳು ಸಂಪೂರ್ಣವಾಗುವವರೆಗೂ ಅಲ್ಲಿದ್ದು, ಅವುಗಳ ದಿವ್ಯತೆಯನ್ನು ಇನ್ನಷ್ಟು ಹೆಚ್ಚಿಸುವುದೇ ಆಗಿದೆ. ಸಾವಿರಾರು ಜನರು ಭಾಗವಹಿಸಿಯೂ ಸಹಾ ಇದುವರೆಗೆ ಈ ಸಂದರ್ಭಗಳಲ್ಲಿ ಯಾವುದೇ ಅನಾಹುತಗಳು ಸಂಭವಿಸದೇ, ಎಲ್ಲವೂ ಅಚ್ಚುಕಟ್ಟಾಗಿ ಜರುಗಿವೆಯೆಂಬುದು ಶೃಂಗೇರಿಯ ನಾಗರೀಕರೆಲ್ಲರ ಪಾಲಿಗೆ ಹೆಮ್ಮೆಯ ವಿಷಯವೇ ಸರಿ.

ಹರಿಹರಾದಿ ದೇವತೆಗಳೆಲ್ಲರೂ ಪರಬ್ರಹ್ಮದ ಸ್ವರೂಪವೆಂದೇ ಪರಿಗಣಿತವಾಗಿರುವ ಶ್ರೀ ಕ್ಷೇತ್ರದಲ್ಲಿ ಮಹಾಶಿವರಾತ್ರಿಯು ನೆರವೇರಿದಷ್ಟೇ ಶ್ರದ್ಧಾ-ಭಕ್ತಿಗಳಿಂದ ಶ್ರೀ ಕೃಷ್ಣಜನ್ಮಾಷ್ಟಮಿ, ಶ್ರೀ ರಾಮನವರಾತ್ರಿ ಮೊದಲಾದವುಗಳು ಆಚರಿಸಲ್ಪಡುತ್ತವೆ. ಇವೆಲ್ಲಾ ವಿಶೇಷ ಸಂದರ್ಭಗಳಲ್ಲೂ ಶ್ರೀ ಶ್ರೀಗಳು ವಿಶೇಷ ಪೂಜೆಗಳನ್ನಾಚರಿಸಿ, ಸನಾತನ ಧರ್ಮದ ಬಗ್ಗೆ ಧಾರ್ಮಿಕರಲ್ಲಿ ಹೆಚ್ಚಿನ ಶ್ರದ್ಧೆಯು ನೆಲೆಸುವಂತೆ ಮಾಡುತ್ತಿದ್ದಾರೆ.

ಕೆಲವೊಂದು ಪೀಠಗಳಲ್ಲಿ ಹಿಂದಿನ ಜಗದ್ಗುರುಗಳು ಬ್ರಹ್ಮೈಕ್ಯರಾಗಿ ಅವುಗಳಿಗೆ ಉತ್ತರಾಧಿಕಾರಿಯಿಲ್ಲವಾದ ಪರಿಸ್ಥಿತಿಯುಂಟಾಗಿತ್ತು. ಆಗ ಶ್ರೀ ಶ್ರೀಗಳು ಅಲ್ಲಿಗೆ ಸಮರ್ಥರಾದ ಪೀಠಾಧಿಪತಿಗಳನ್ನು ಆಯ್ಕೆ ಮಾಡಿ, ಅವಶ್ಯಕತೆಯಿದ್ದಲ್ಲಿ ಅವರಿಗೆ ಹೆಚ್ಚಿನ ವೇದಾಂತ ವಿಚಾರಗಳನ್ನು ಅರಿಯಲು ಅನುವು ಮಾಡಿಸಿಕೊಟ್ಟು, ಧರ್ಮಕ್ಕೆ ಚ್ಯುತಿಬಾರದಂತೆ ವ್ಯವಸ್ಥೆಗೊಳಿಸಿದ್ದರು. ಅಲ್ಲೆಲ್ಲಾ ಶ್ರೀ ಶ್ರೀಗಳು ಸೂಚಿಸಿರುವ ಗುರುವರ್ಯರು ಆಯಾ ಪೀಠಗಳ ಪರಂಪರೆಗನುಗುಣವಾಗಿ ಧರ್ಮವನ್ನಾಚರಿಸುತ್ತಾ, ಶಿಷ್ಯವೃಂದಕ್ಕೆ ಸರಿದಾರಿ ತೋರುತ್ತಿರುವುದು ಜನಜನಿತವಾದ ವಿಚಾರ. ಇದು ಜಗದ್ಗುರುಗಳು ಧರ್ಮದ ಬಗೆಗೆ ಇರಿಸಿರುವ ಕಾಳಜಿಯನ್ನು ತೋರಿಸಿಕೊಡುತ್ತಿದೆ.

ಶತಮಾನದ ಇತಿಹಾಸವಿರುವ ಸದ್ವಿದ್ಯಾಸಂಜೀವಿನಿ ಸಂಸ್ಕೃತ ಪಾಠಶಾಲೆಯಲ್ಲಿ ಕಲಿತ ವಿದ್ವಾಂಸರಿಗೆ ದೇಶದೆಲ್ಲೆಡೆಯಲ್ಲಿ ಮನ್ನಣೆಯಿದೆ. ಇಲ್ಲಿನ ವಿದ್ಯಾರ್ಥಿಗಳ ಕಲಿಕೆಯ ಪ್ರಗತಿಯನ್ನು ಮಹಾಸ್ವಾಮಿಗಳೇ ಆಗಾಗ ಪರೀಕ್ಷಿಸುತ್ತಿರುತ್ತಾರೆ. ಲೌಕಿಕ ವಿದ್ಯೆಯನ್ನು ಕಲಿಯಲು ಸಹಾ ಸಂಸ್ಥಾನದಿಂದ ಅರ್ಹ ವಿದ್ಯಾರ್ಥಿಗಳಿಗೆ ನೆರವನ್ನು ನೀಡಲಾಗುತ್ತದೆ. ಇನ್ನು ಮಠದ ನೌಕರರ ಮಕ್ಕಳೆಲ್ಲರೂ ಮಹಾಸ್ವಾಮಿಗಳ ಆಶೀರ್ವಾದ ಹಾಗೂ ವೀಣಾಪಾಣಿಯಾದ ತಾಯಿ ಶಾರದೆಯ ಕೃಪೆಯಿಂದ ಸುಸಂಸ್ಕೃತರಾಗಿ ಕಲಿಕೆಯಲ್ಲೆಂದೂ ಹಿಂದೆಬೀಳದೆ, ದೇಶ-ವಿದೇಶಗಳಲ್ಲಿ ಸಾಧನೆಗೈದಿದ್ದಾರೆ.

ಶ್ರೀ ಶ್ರೀಗಳ 59ನೇ ವರ್ಧಂತಿಯ ಸಂದರ್ಭದಲ್ಲಿ ಹೊರಬಂದ ‘ಶಂಕರಕೃಪಾ’ದ ವಿಶೇಷಾಂಕದಲ್ಲಿ ಜಗದ್ಗುರುಗಳ ಮಹಿಮೆಯನ್ನು ಶ್ರೀ ಮಠದ ಆಡಳಿತಾಧಿಕಾರಿಗಳಾದ ಶ್ರೀ ಡಾ. ವಿ. ಆರ್. ಗೌರೀಶಂಕರ್ ರವರು ಹೀಗೆ ಬಣ್ಣಿಸಿದ್ದಾರೆ: “ಶ್ರೀ ಶಂಕರ ಭಗವತ್ಪಾದರು ‘ಆಸೇತು ಹಿಮಾಚಲ’ದವರೆಗೆ ಸಂಚರಿಸಿ, ಧರ್ಮಪ್ರತಿಷ್ಠಾಪನಾಚಾರ್ಯರಾದುದನ್ನು ಕೇಳಿಬಲ್ಲೆವು. ಅಂತೆಯೇ ಧರ್ಮಪ್ರತಿಷ್ಠಾಪನೆಗಾಗಿ ಜಗದ್ಗುರುಗಳವರು ದಿಗ್ವಿಜಯ ಯಾತ್ರೆ ಕೈಗೊಂಡು ಭಾರತದ ಉದ್ದಗಲಕ್ಕೆ ಸಂಚರಿಸಿದ್ದಾರೆ. ಸನಾತನ ಸಂಸ್ಕೃತಿಯನ್ನು ಬೆಳಸಿದ್ದಾರೆ. ಅವರ ಪಾಂಡಿತ್ಯಕ್ಕೆ ಪಂಡಿತಸಮೂಹವೇ ತಲೆದೂಗುತ್ತದೆ. ಸಂಸ್ಕೃತದಲ್ಲಿ ಮಾತ್ರವಲ್ಲದೇ ಇತರ ಭಾರತೀಯ ಭಾಷೆಗಳಲ್ಲಿ ಅವರ ಪ್ರವಚನ ವಾಗ್ವೈಖರಿಯು ಶ್ರೋತೃಗಳನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಶ್ರೀಮಠೀಯ ಕಾರ್ಯಗಳಿಗೆ ಶ್ರೀ ಶ್ರೀಗಳವರ ಅನುಗ್ರಹವೇ ರಕ್ಷಾಕವಚ. ಅವರ ಅನುಗ್ರಹದಿಂದ ಎಷ್ಟೋ ಮಹತ್ತರ ಕಾರ್ಯಗಳು ಸುಲಭವಾಗಿ ಈಡೇರಿವೆ.”

ಶ್ರೀ ಶ್ರೀಗಳ ದರ್ಶನಕ್ಕೆ ಅನೇಕ ಕಡೆಗಳಿಂದ ವಿವಿಧ ಮತಗಳ ಗುರುಗಳು ಆಗಾಗ ಆಗಮಿಸುತ್ತಿರುತ್ತಾರೆ. ಅವರೊಡನೆ ಶ್ರೀ ಶ್ರೀಗಳು ಪ್ರಸ್ತುತ ಧರ್ಮವು ಎದುರಿಸುತ್ತಿರುವ ಸವಾಲುಗಳು, ಅವುಗಳಿಗೆ ಒದಗಿಸಬಹುದಾದ ಪರಿಹಾರಗಳ ಬಗ್ಗೆ ಕೂಲಂಕುಷವಾಗಿ ಚರ್ಚಿಸುತ್ತಾರೆ. ಅನೇಕ ವರ್ಷಗಳ ಹಿಂದೆ ಶೃಂಗೇರಿಯಲ್ಲಿ ಜರುಗಿದ ಅದ್ವೈತ ಯತಿ ಸಮ್ಮೇಳನದ ಯಶೋಗಾಥೆಯನ್ನಿಲ್ಲಿ ಸ್ಮರಿಸಬಹುದಾಗಿದೆ.

ವಸುಧೈವ ಕುಟುಂಬಕಮ್:

ಜಗದ್ಗುರುಗಳು ಯಾರನ್ನೂ ದೂರವಿಡುವುದಿಲ್ಲ; ನೊಂದ ಭಕ್ತರ ಸಮಸ್ಯೆಗಳನ್ನಾಲಿಸಿ, ಅವುಗಳಿಗೆ ಸಮರ್ಪಕ ಪರಿಹಾರವನ್ನೊದಗಿಸಿ ಮಾರ್ಗದರ್ಶನ ನೀಡುತ್ತಾರೆ. ಎಷ್ಟೋ ಭಕ್ತರು ಮಹಾಸ್ವಾಮಿಗಳ ಅನುಗ್ರಹದಿಂದ ಅನೇಕ ಕಂಟಕಗಳಿಂದ, ಬಹುಕಾಲದಿಂದ ಅವರ ಮನಸ್ಸನ್ನು ಹಿಂಡುತ್ತಿದ್ದ ಯಾತನೆಗಳಿಂದ ಪಾರಾಗಿರುವ ಅನುಭವಗಳನ್ನು ಕೇಳಿದ್ದೇನೆ. ಆಧ್ಯಾತ್ಮಿಕ ಶಾಂತಿಯನ್ನರಸಿ ಬಂದ ವಿದೇಶಿ ಭಕ್ತರೊಬ್ಬರು ಶೃಂಗೇರಿಯಲ್ಲಿಯೇ ಬಹುವರ್ಷಗಳಿಂದ ನೆಲೆಸಿ, ಜಗದ್ಗುರುಗಳ ನಿವಾಸವಾದ ನರಸಿಂಹವನದಲ್ಲಿ ಮೌನವಾಗಿ ಸಾಧನಾನಿರತರಾಗಿರುವುದನ್ನು ನಾವಿಂದಿಗೂ ನೋಡಬಹುದು! ಶ್ರೀ ಶ್ರೀಗಳ ತಪಃಶಕ್ತಿಗೆ, ಅವರ ಕರುಣಾ ಹೃದಯಕ್ಕೆ ಸನಾತನ ಧರ್ಮೀಯರಲ್ಲದವರೂ ಮಾರುಹೋಗಿದ್ದಾರೆ. ದೇಶದಲ್ಲಿ ಕೋಮುದಳ್ಳುರಿ ಹೊತ್ತಿ ಉರಿಯುತ್ತಿರುವ ಈ ಕಾಲದಲ್ಲಿ ಸಹಾ ಮಹಾಸ್ವಾಮಿಗಳ ಅಡ್ಡಪಲ್ಲಕ್ಕಿ ಉತ್ಸವವು ನಮ್ಮ ಪೂಜಾಮಂದಿರದವರೆಗೂ ಎಂದಿನಂತೆ ಚಿತ್ತೈಸಬೇಕೆಂದು ಬೇರೊಂದು ಧರ್ಮದ ಮುಖಂಡರು ಭಿನ್ನವಿಸಿಕೊಂಡಂತಹಾ ಘಟನೆಯೊಂದು ಇಲ್ಲಿ ಜರುಗಿದೆಯೆಂಬ ವಿಷಯವು ಹೆಚ್ಚಿನವರಿಗೆ ತಿಳಿಯದು.

‘ಅನುಗ್ರಹ ಸಂದೇಶ’ವೊಂದರಲ್ಲಿ ಮಾನವಜನ್ಮವನ್ನು ಸಾರ್ಥಕಪಡಿಸಿಕೊಳ್ಳುವಂತೆ ಜಗದ್ಗುರುಗಳು ಹೀಗೆ ಅಪ್ಪಣೆ ಕೊಡಿಸಿದ್ದಾರೆ: “ಕಾಮಧೇನು ಹಸುವು ತನ್ನ ಒಡೆಯನ ಎಲ್ಲಾ ಆಸೆಗಳನ್ನೂ ಈಡೇರಿಸುತ್ತದೆ. ಅಂತಹ ಕಾಮಧೇನುವನ್ನು ಪಡೆದವನು ಒಂದು ದಿನ ತನ್ನ ಗಾಡಿಯ ಎತ್ತು ಸಿಗಲಿಲ್ಲವೆಂಬ ಕಾರಣದಿಂದ ಕಾಮಧೇನುವನ್ನು ನೆಲವನ್ನು ಊಳಲು ಉಪಯೋಗಿಸಿದರೆ ಅಂತಹ ಮೂರ್ಖನ ಬಗ್ಗೆ ಹೇಳುವುದೇನು? ಹಾಗೆಯೇ ಪುಣ್ಯಕರ್ಮಗಳನ್ನು ಮಾಡಲು ಈ ಮಾನವ ಜನ್ಮವನ್ನು ಉಪಯೋಗಿಸದಿರುವವನೂ ಮೂರ್ಖನೇ. ಆದ್ದರಿಂದ ಮಾನವಜನ್ಮವನ್ನು ಪಡೆಯುವುದೇ ದುರ್ಲಭ ಎನ್ನುವುದಾದರೆ, ಅದನ್ನು ಸದುಪಯೋಗಪಡಿಸಿಕೊಳ್ಳುವುದು ಮತ್ತೂ ಕಷ್ಟಕರ.”

ಪಶು-ಪಕ್ಷಿಗಳೆಡೆಗೂ ಕರುಣೆ:

ಜಗದ್ಗುರುಗಳ ನಿವಾಸವಾದ ನರಸಿಂಹವನದಲ್ಲಿ ಜಿಂಕೆಗಳು, ಹಸುಗಳು, ಪಾರಿವಾಳಗಳು, ನವಿಲುಗಳೇ ಮೊದಲಾದ ಪ್ರಾಣಿ-ಪಕ್ಷಿಗಳು ನಿರ್ಭೀತವಾಗಿ ಸಂಚರಿಸಿಕೊಂಡಿರುವುದನ್ನು ನೋಡಬಹುದು. ತಮ್ಮ ಅವಿರತ ಅನುಷ್ಠಾನಗಳ ನಡುವೆಯೂ ಶ್ರೀ ಸನ್ನಿಧಾನಂಗಳವರು ಗೋಶಾಲೆ, ಗಜಶಾಲೆ ಹಾಗೂ ಅಶ್ವಶಾಲೆಗಳಿಗೆ ಭೇಟಿ ನೀಡಿ ಅಲ್ಲಿನ ಜೀವಿಗಳ ಯೋಗಕ್ಷೇಮದ ಬಗ್ಗೆ ವಿಚಾರಿಸಿಕೊಳ್ಳುತ್ತಾರೆ. ಅಲ್ಲಿ ಕರುವೊಂದು ಜನಿಸಿದ್ದನ್ನು ಕಂಡರೆ ಸಂತಸದಿಂದ ಅದರ ಮೈದಡವುತ್ತಾರೆ. ಜಿಂಕೆಮರಿಗಳಂತೂ ಶ್ರೀ ಶ್ರೀಗಳ ಸನಿಹದಲ್ಲೇ ಇರುತ್ತವೆ. ಕೆಲವರ್ಷಗಳ ಹಿಂದೆ ಮಠದಲ್ಲಿ ಸ್ವಲ್ಪ ಹಾವಳಿ ನೆಡೆಸಿದ ‘ಕರ್ಣ’ ಆನೆಯನ್ನು ಕಳುಹಿಸಬೇಕಾದ ಸಂದರ್ಭದಲ್ಲಿ ಲಾರಿಯನ್ನು ಹತ್ತದೇ, ಅದನ್ನೂ ಜಖಂಗೊಳಿಸಿ ಅದು ಅಲ್ಲಿದ್ದ ಸಿಬ್ಬಂದಿಗಳ ಮೇಲೂ ದಾಳಿ ನೆಡೆಸುವುದರಲ್ಲಿತ್ತು. ಇದನ್ನು ತಿಳಿದ ಮಹಾಸ್ವಾಮಿಗಳು ಅದಕ್ಕೆ ಸೇಬುಹಣ್ಣೊಂದನ್ನು ನೀಡಿ, ಮಕ್ಕಳಿಗೆ ತಿಳಿಹೇಳುವಂತೆ ಸಮಾಧಾನಗೊಳಿಸಿ, ಕಾಲಭೈರವನ ಅರ್ಚನಾ ಪ್ರಸಾದವನ್ನು ನೀಡಿ, ಅದನ್ನು ಮನಸ್ಸಿಲ್ಲದ ಮನಸ್ಸಿನಿಂದಲೇ ಬೀಳ್ಕೊಟ್ಟಿದ್ದನ್ನು ನರಸಿಂಹವನದ ನಿವಾಸಿಗಳು ಇಂದಿಗೂ ಸ್ಮರಿಸುತ್ತಾರೆ.

ಹೀಗೆ ಜಗದ್ಗುರು ಶ್ರೀ ಶ್ರೀ ಶ್ರೀ ಭಾರತೀತೀರ್ಥರು ಭಕ್ತಜನಚಿತ್ತಾಪಹಾರಕರಾಗಿ, ಸಮಸ್ತಜೀವಿಗಳ ಕಲ್ಯಾಣವನ್ನೇ ಬಯಸುತ್ತಾ, ಸರ್ವರನ್ನೂ ಅನುಗ್ರಹಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಆದಿಗುರು ಶ್ರೀ ಶಂಕರರು ರಚಿಸಿದ ‘ಧನ್ಯಾಷ್ಟಕ’ದ ಶ್ಲೋಕವೊಂದು ನೆನಪಿಗೆ ಬರುತ್ತಿದೆ. ಅದೆಂದರೆ:

ಶಾಂತೈರನನ್ಯ ಮತಿಭಿರ್ಮಧುರ ಸ್ವಭಾವೈ-

ರೇಕತ್ವ ನಿಶ್ಚಿತ ಮನೋಭಿರಪೇತ ಮೋಹೈಃ|

ಸಾಕಂ ವನೇಷು ವಿದಿತಾತ್ಮಪದ ಸ್ವರೂಪೈ-

ಸ್ತದ್ವಸ್ತು ಸಮ್ಯಗನಿಶಂ ವಿಮೃಶಂತಿ ಧನ್ಯಾಃ||

[ಧನ್ಯಾಷ್ಟಕಮ್, ಶ್ಲೋ - 8]

“ಶಾಂತಾತ್ಮರೂ, ಸ್ಥಿತಪ್ರಜ್ಞರೂ, ಮಧುರಸ್ವಭಾವದವರೂ, ಏಕಮೇವಾದ್ವಿತೀಯ ಪರಬ್ರಹ್ಮವಸ್ತುವಿನಲ್ಲಿ ಮನಸ್ಸನ್ನು ನೆಟ್ಟವರೂ, ಮೋಹರಹಿತರೂ, ಆತ್ಮದ ಸ್ವರೂಪದ ಬಗ್ಗೆ ಜ್ಞಾನವನ್ನು ಹೊಂದಿದವರೂ ಆದ ಜ್ಞಾನಿಗಳೊಡನೆ ವನಪ್ರದೇಶಗಳಲ್ಲಿ ಸದಾ ಆತ್ಮತತ್ತ್ವವಿಚಾರವನ್ನು ಮಾಡುತ್ತಿರುವವರೇ ಸಾರ್ಥಕ ಬಾಳುವೆಯನ್ನು ನೆಡೆಸುತ್ತಿರುವವರು.” ಈ ಶ್ಲೋಕಕ್ಕೆ ಜೀವಂತ ಉದಾಹರಣೆಯಾಗಿ ಜಗದ್ಗುರುಗಳು ಶೃಂಗೇರಿ ಶಾರದಾಪೀಠದಲ್ಲಿ ಶೋಭಿಸುತ್ತಿದ್ದಾರೆ.

ಮಹಾಸನ್ನಿಧಾನಂಗಳವರ ಸನ್ನಿಧಿಯ ಬಳಿಯಲ್ಲಿ ಅನೇಕ ಸಂವತ್ಸರಗಳ ನೆಲೆಸುವ ಭಾಗ್ಯಲಭಿಸಿದ ಈ ಕಿರಿಯನ ಕಣ್ಣಿಗೆ ಕಂಡ ಕೆಲಹೊಳಹುಗಳಿವು. ಇವರ ದಿವ್ಯವ್ಯಕ್ತಿತ್ವವನ್ನು ಈ ಕಿರುಲೇಖನದಲ್ಲಿ ವಿವರಿಸತೊಡಗಿದರೆ, ಸಾಗರದ ಸೀಮೆಯನ್ನರಿಯಲು ತೆಪ್ಪದಲ್ಲಿ ಹೊರಟಂತಾದೀತು! ಇಂಥಹಾ ಮಹಾತ್ಮರ 60ನೇ ವರ್ಧಂತಿಯ ಸಂದರ್ಭದಲ್ಲಿ ಶ್ರೀ ಶಾರದಾಚಂದ್ರಮೌಳೀಶ್ವರರ ಕೃಪೆ, ಶ್ರೀ ಶ್ರೀಗಳ ಅನುಗ್ರಹ ನಮ್ಮ ಮೇಲೆ ನಿರಂತರವಾಗಿದ್ದು, ನಮ್ಮ ಧರ್ಮನಿಷ್ಠೆಯು ವೃದ್ಧಿಯಾಗಲೆಂದು ಪ್ರಾರ್ಥಿಸೋಣ. ಅಲ್ಲವೇ?

[ಸಲಹೆ-ಸಹಕಾರ: ಶ್ರೀ ವೆಂಕಟೇಶ ಭಟ್, ಬೆಂಗಳೂರು ಶಂಕರ ಮಠ; ಶ್ರೀ ಎನ್.ಎಂ. ಗೋಪಾಲಕೃಷ್ಣ, ನರಸಿಂಹವನ]

**********************************

ಜೈ ಗಾಯತ್ರೀ ದೇವಿ

ಲೇಖಕ:

ಎನ್. ಜಿ. ಪ್ರಭುಪ್ರಸಾದ್, ಶೃಂಗೇರಿ

2 comments:

  1. ಸಾಗರದ ಸೀಮೆಯನ್ನರಿಯಲು ತೆಪ್ಪದಲ್ಲಿ ಹೊರಟಂತಾದೀತು!
    ಬರಹದಷ್ಟೆ ಈ ಹೇಳಿಕೆ 'modest'

    ReplyDelete