Friday, December 9, 2011

ಹಂದಿ ಮತ್ತು ಕುದುರೆ

    ಒಬ್ಬ ಜಮೀನುದಾರನ ಬಳಿ ಅನೇಕ ತಳಿಯ ಕುದುರೆಗಳಿದ್ದವು.  ಬೇರೆ ಬೇರೆ ತರಹದ ಕುದುರೆಗಳನ್ನು ಖರೀದಿಸಿ ಸಂಗ್ರಹಿಸುವುದು ಅವನ ನೆಚ್ಚಿನ ಹವ್ಯಾಸವಾಗಿತ್ತು. ಅವನ ನೆರೆಯವನ ಬಳಿ, ಅವನ ಹತ್ತಿರ ಇರದ,  ಒಂದು ವಿಶೇಷ ಜಾತಿಯ ಕುದುರೆಯಿತ್ತು. ಅದರ ಮೇಲೆ ಅವನ ಕಣ್ಣು ಬಿತ್ತು. ಹಾಗಾಗಿ ನೆರೆಯವನನ್ನು ತುಂಬಾ ಪೀಡಿಸಿ, ಹೆಚ್ಚಿನ ಬೆಲೆ ತೆತ್ತು ಅದನ್ನು ಕೊಂಡುಕೊಂಡನು. ಆದರೆ ದುರ್ದೈವವಶಾತ್ ಕೆಲವೇ ದಿನಗಳಲ್ಲಿ ಆ ಕುದುರೆಯು ಕಾಯಿಲೆ ಬಿತ್ತು. ಆಗ ಅಲ್ಲಿಗೆ ಬಂದು ಪರಿಶೀಲಿಸಿದ ಪಶುವೈದ್ಯರು ಆ ಕುದುರೆಗೆ ವೈರಾಣು ಜ್ವರ   ಬಂದಿದೆಯೆಂದೂ, ಇನ್ನೂ ಮೂರು ದಿನಗಳ ಕಾಲ ಅದರ ಬಗ್ಗೆ ನಿಗಾ ವಹಿಸಬೇಕೆಂದೂ ಜಮೀನುದಾರನರಿಗೆ ತಿಳಿಸಿದರು. ಅಲ್ಲದೇ, ಅಕಾಸ್ಮಾತ್ ಮೂರು ದಿನಗಳಲ್ಲಿ ಅದು ಗುಣಮುಖವಾಗದಿದ್ದಲ್ಲಿ, ಅದರಿಂದ ಬೇರೆ ಕುದುರೆಗಳಿಗೆ ಈ ರೋಗ ದಾಟುವ ಸಂಭವವಿರುವುದರಿಂದ, ಅದನ್ನು ಸಾಯಿಸಬೇಕಾಗುವುದೆಂದೂ ಹೇಳಿದರು. ಅವರಿಬ್ಬರ ಮಾತುಕತೆಯನ್ನು ಅಲ್ಲಿಯೇ ಇದ್ದ ಹಂದಿಯೊಂದು  ಕೇಳಿಸಿಕೊಂಡಿತು.
    ನಂತರ ಅದು ಕುದುರೆಯ ಬಳಿ ಹೋಗಿ ಹೀಗೆಂದಿತು: "ಗೆಳೆಯನೇ ! ಬೇಗ ಹುಶಾರಾಗು. ಇಲ್ಲವಾದಲ್ಲಿ ಅವರು ನಿನ್ನನ್ನು ಕೊಂದುಬಿಡುತ್ತಾರೆ."
      ಮಾರನೆಯ ದಿನ ಮತ್ತೆ ಆ ವೈದ್ಯರು ಬಂದು ಔಷಧಿ ಕೊಟ್ಟು ಹೋದರು. ತರುವಾಯ ಆ ಹಂದಿ ಮತ್ತೆ ಕುದುರೆಯಿದ್ದಲ್ಲಿ ಬಂದು "ಮಿತ್ರಾ.. ನೀನು ಏಳದಿದ್ದಲ್ಲಿ ನಿನ್ನ ಕೊನೆಯಾಗಿಬಿಡುತ್ತದೆ. ಎದ್ದು ಓಡಾಡಲು ಪ್ರಯತ್ನಿಸು. ನಾನು ನಿನಗೆ ಸಹಾಯ ಮಾಡುತ್ತೇನೆ. ಹಾ.. ಈಗ ಏಳು! ಒಂದು, ಎರಡು, ಮೂರು.. ತಯಾರಾಗು." ಎಂದು ಹುರಿದುಂಬಿಸಿತು. ಆದರೆ ಆ ಕುದುರೆಗೆ ಏಳಲು ಸಾಧ್ಯವಾಗಲೇ ಇಲ್ಲ.
     ನಂತರದ ದಿನ ವೈದ್ಯರು ಬಂದಾಗಲೂ ಅದರ ಪರಿಸ್ಥಿತಿಯೇನೂ ಸುಧಾರಿಸಿರಲಿಲ್ಲ. ಹಾಗಾಗಿ ಅವರು "ಇದರಿಂದ ಬೇರೆ ಕುದುರೆಗಳಿಗೆ  ಈ ರೋಗ ಹರಡುವ ಸಂಭವವಿದೆ. ನಾಳೆ ಇದನ್ನು ಸಾಯಿಸಿಬಿಡೋಣ" ಎಂದು ಹೇಳಿ ವಾಪಾಸಾದರು.
      ಅವರು ತೆರಳಿದ ತರುವಾಯ ಅಲ್ಲಿಗೆ ಬಂದ ಹಂದಿ ಕುದುರೆಯನ್ನುದ್ದೇಶಿಸಿ "ಇದು ನಿನ್ನ ಮಾಡು ಇಲ್ಲವೇ ಮಡಿ ಹೋರಾಟ. ಇವತ್ತು ನೀನು ಎದ್ದು ಓಡಾಡದಿದ್ದರೆ, ಇನ್ನೆಂದೂ ನಿನ್ನಿಂದ ಓಡಾಡಲು ಸಾಧ್ಯವಾಗುವುದಿಲ್ಲ. ಹಾ! ಹಾಗೆ ಏಳು! ಪ್ರಯತ್ನಿಸು! ನಿನಗೆ ಇದು ಅಸಾಧ್ಯವೇನಲ್ಲ." ಎಂದು ಪ್ರೋತ್ಸಾಹಿಸಿ, ಆ ಕುದುರೆ ಓಡಾಡುವಂತೆ ಮಾಡುವಲ್ಲಿ ಯಶಸ್ವಿಯಾಯಿತು.
ಅಕಸ್ಮಾತ್ತಾಗಿ ಅಲ್ಲಿಗೆ ಬಂದ ಜಮೀನುದಾರನು ಕುದುರೆ ಗುಣಮುಖವಾಗಿರುವುದನ್ನು ಕಂಡು "ಆಹಾ! ಎಂತಹಾ ವಿಸ್ಮಯ.. ನನ್ನ ಕುದುರೆ ಗುಣಮುಖವಾಗಿದೆ. ಇದಕ್ಕಾಗಿ ಒಂದು ಔತಣವನ್ನೇ ಏರ್ಪಡಿಸೋಣ. ಈ ಕೊಬ್ಬಿರುವ ಹಂದಿಯನ್ನೇ ಕಡಿದು ಭರ್ಜರಿ ಭೋಜನ ಮಾಡೋಣ!" ಎಂದು ಉದ್ಗರಿಸಿದನು.

ನೀತಿ: ಇದು ಸಾಧಾರಣವಾಗಿ ಎಲ್ಲಾ ಸಂಸ್ಥೆಗಳಲ್ಲಿ ಜರುಗುವ ವಿದ್ಯಮಾನವಾಗಿದೆ. ಯಾರು ನಿಜವಾಗಿ ಕೆಲಸ ಮಾಡುತ್ತಿದ್ದಾರೆ ಅಥವಾ ಕೆಲಸ ಮಾಡಲು ಸ್ಫೂರ್ತಿ ತುಂಬುತ್ತಿದ್ದಾರೆನ್ನುವುದು ತಿಳಿಯುವುದೇ ಇಲ್ಲ.


[http://www.vijaykarnatakaepaper.com/svww_zoomart.php?Artname=20120718a_011101003&ileft=757&itop=86&zoomRatio=130&AN=20120718a_011101003]
*************************************

[ಮಿಂಚಂಚೆಯಲ್ಲಿ ತೇಲಿಬಂದ ಕಥೆ]

ಸಂಗ್ರಹ: ಪ್ರಭುಪ್ರಸಾದ್ ನಡುತೋಟ, ಶೃಂಗೇರಿ 
[ppsringeri.blogspot.com]